Saturday, January 17, 2009

ನಾನು ಏನೂ ಹೇಳಲಾರೆ..

ಬರೆಯಲು ಪುಟ ತೆರೆದು ಬ್ಲ್ಯಾಂಕ್ ಇಟ್ಟು ಯೋಚಿಸಿದ್ದು ಹೆಚ್ಚು ಕಡಿಮೆ ಒಂದು ಗಂಟೆ. ಮುಂಬೈ ದಾಳಿ: ಪ್ರಭುತ್ವಕ್ಕೆ ಕೊನೆಯ ಎಚ್ಚರಿಕೆ ಲೇಖನಕ್ಕೊಂದು ಪ್ರತಿಕ್ರಿಯಿಸಬೇಕು, ಆದರೆ ಹೇಗೆ? ಪ್ರತಿಕ್ರಿಯಿಸದ್ದಿದರೆ ದೊಡ್ಡ ಹಡಗೇನು ಮುಳುಗುವುದಿಲ್ಲ. ಇಂಥ ಸಾವಿರಾರು ವಿಷಯಗಳಿಗೆ ತುಟಿ ಬಿಚ್ಚದ ದೊಡ್ಡ ಸಮುದಾಯವೇ ಇದೆ. ಮಾತಾಡುವವರು 'ನಾವು' ಬೆರಳೆಣಿಕೆಯಷ್ಟು. ಆದರೂ ಎಲ್ಲ ತೀರ್ಮಾನಗಳು ನಮ್ಮ ಮೂಗಿನ ನೇರಕ್ಕಿದ್ದರೆ ಸಮಾಧಾನ ಇಲ್ಲವಾದರೆ ಅದು ಅಸತ್ಯ. ಹಾಗಾದರೆ ನನ್ನದು ಸತ್ಯಶೋಧನೆಯೇ? ಅಯ್ಯೋ ಹಾಗಿನಿಲ್ಲ. ಸತ್ಯ ಒಂದಿದ್ದರೆ ತಾನೇ, ಯಾಕೆಂದರೆ ಸತ್ಯಗಳು ಅನೇಕ ಎಂದು ಮೊನ್ನೆ ಸೆಮಿನಾರಿನಲ್ಲಿ ಕೇಳಿದ್ದೇನೆ. ನನ್ನದೇ ಸತ್ಯ ಎಂದು ವಾದಿಸೋಣವೆಂದರೆ ದಕ್ಕಿಸಿಕೊಳ್ಳೋ ತಾಕತ್ತಿಲ್ಲ.
ಅದಕ್ಕಿಂತ ಮೊದಲು ವಿಷಯದ ಆಳ ಅಗಲದ ಅರಿವಿಲ್ಲ. ಯಾವುದೋ ವಿಷಯವನ್ನು ಇನ್ಯಾವುದೋ ಸಂಗತಿಗೆ ಜೋಡಿಸಿ ಮಾತಾಡಬಲ್ಲ ಜಾಣ್ಮೆಯೂ ಇಲ್ಲ. ಬೇರೆ ಸಂಪದಿಗರಾದರೋ ಆಗಬಹುದು ಆದರೆ ನಾನು ಹೇಳಿಕೇಳಿ ಸಾಹಿತ್ಯದ ವಿದ್ಯಾರ್ಥಿ. ನನಗೊಂದು ಹೀಗೆ ಮಾತಾಡಬೇಕೆಂಬ 'ಶಿಸ್ತಿದೆ'(?). ಈ 'ಇಸಂ' ಹಿಡಿದು ಮಾತಾಡೋಣವೆಂದರೆ ನಮ್ಮ ದೇಶಕ್ಕೆ ನೂರಾರು ನೇತಾರರು ಸಾವಿರಾರು ವಾದಗಳು. ಒಬ್ಬರ ಬಗ್ಗೆ ಒಬ್ಬರಿಗೆ ನಂಬಿಕೆಯು ಆದರಣೆಯೂ ಇಲ್ಲ. ಪ್ರಗತಿಪರ ಧೋರಣೆಗಳನ್ನು ಇರಬೇಕು ನನ್ನ ವಿಚಾರದಲ್ಲಿ ಎಂದುಕೊಳ್ಳುತ್ತೇನೆ, ಹಾಗಂದರೇನು ಎಂಬ ಬಗ್ಗೆ ಯಾರ ವ್ಯಾಖ್ಯಾನಗಳನ್ನು ನಂಬಬೇಕೆಂಬ ತಕರಾರು.
ಛೇ, ಇಷ್ಟು ವರ್ಷ ಓದಿದ 'ವಸ್ತುನಿಷ್ಠ' ವಿಚಾರವಿದೆಯಲ್ಲ, ಬೆಣ್ಣೆ ಕೈಯಲ್ಲಿ ಹಿಡಿದು ತುಪ್ಪಕ್ಕೆ ಹುಡುಕಿದೆನಲ್ಲ. ನೇರ ಸುದ್ದಿಗಳನ್ನು ತೆಗೆದು ಅದರಿಂದ ನನ್ನ ವಿಚಾರಗಳನ್ನು ಪೋಣಿಸಿಕೊಳ್ಳಬೇಕೆಂದುಕೊಳ್ಳುತ್ತೇನೆ, ಆದರೆ ಆ ಪತ್ರಿಕೆಗಳಲ್ಲೂ ಕೆಂಪು ಕೇಸರಿ ಹಸಿರು ಎಂಬ ಎಲ್ಲ ಬಣ್ಣಗಳು ಇವೆಯಂತೆ. ಹಾಗಾದರೆ ನೂರು ರೀತಿಯ ನೂರು ಆಕೃತಿಯ ವ್ಯಾಖ್ಯಾನಗಳು ಇವೆಯಲ್ಲ ಯಾವುದನ್ನು ನಂಬಲಿ ನಿಜವೆಂದು? ನಾನು ಎಂಬ ಅಹಂ ಸರಿಯದೇ ಸತ್ಯದ ಅರಿವಾಗದು ಅದ್ದರಿಂದ ನನ್ನ ಅಹಂ ನಿರಸನವಾಗದೇ ಸತ್ಯ ಗೋಚರಿಸದು ಎಂದರೆ ನನಗೆ ಒಂದು ಅನನ್ಯತೆಯೇ ಇರದೇ ನಾನು ಹೇಗೆ ಪ್ರತಿಕ್ರಿಯಿಸುವುದು?
ಆದರೂ ನನಗೆ ಏತ ಎಂದರೆ ಪ್ರೇತ ಎಂದೇ ರೂಢಿ. ಅದೇ ನನಗೆ 'ವಿಚಾರ ಮಾಡುವ ಹುಡುಗ ಎಂಬ ಬಿರುದು ಕೊಡಿಸಿದೆ. ಈಗ ಎನೋ ಹೊಳೆಯುತ್ತಿದೆ. ಸತ್ಯವೆಂಬುದು ಆಡವವನ ಜಾಣತನದ ಮೇಲೆ ಅವಲಂಬಿಸಿರುತ್ತದೆ. ಬಾಯಿ ದೊಡ್ಡದಿರಬೇಕು ಅಷ್ಟೆ. ಬೊಬ್ಬೆ ಹಾಕಿ ಎದುರಿನವರನ್ನು ಗೆದ್ದರಾಯಿತು, ಮತ್ತೆ ಗೆದ್ದವರದ್ದೇ ಸತ್ಯ ಅಲ್ಲವೇ? ಇಲ್ಲಿ ತನಕ ಗೆದ್ದವರು ಮಾಡಿದ್ದು ಇದೇ ಅಲ್ಲವೇ?
ಯಾಕೋ ದೌರ್ಜನ್ಯದಿಂದ ಸತ್ಯ ಸಾಧಿಸಲು ನನ್ನ ಮನಸು ಒಪ್ಪುತ್ತಿಲ್ಲ. ಹಾಗಾಗಿ ಏನೂ ಪ್ರತಿಕ್ರಿಯೆ ನೀಡಲು ಇಷ್ಟವಿಲ್ಲ ಬೇಡ ಬಿಡಿ. ನನಗೂ ಹುಚ್ಚು, ನನ್ನ ಪ್ರತಿಕ್ರಿಯೆ ಇಲ್ಲದಿದ್ದರೆ ಲೋಕ ಮುಳುಗುವುದಿಲ್ಲ.

'ಹೆಣ್ಣಾಗುವ' ಒಂದು ಪ್ರಸಂಗ

ನನ್ನ ಮೊಬೈಲ್ ಗೊಂದು ಮಿಸ್ಡ್ ಕಾಲ್. ಇದು ಯಾರು ಎಂದು ಕೇಳಿ ರಿಪ್ಲೇ ಮಾಡಿದೆ. ತಕ್ಷಣವೇ ಅಲ್ಲಿಂದ ಶುರುವಾಯ್ತು ಮೆಸೇಜುಗಳ ಸುರಿಮಳೆ. ನಮ್ಮ ನಡುವಿನ ಸಂಭಾಷಣೆಯನ್ನು ಹಾಗೆಯೇ ನೀಡಿದರೆ ಚೆನ್ನ.'ನೀವು ರಚನ್ ಅಲ್ವಾ? ''ಅಲ್ಲ, ನಾನು ರಚನ್ ಅಲ್ಲ''ನಿಮ್ಮ ಹೆಸರು ಕೇಳಬಹುದೇ?''ಕ್ಷಮಿಸಿ, ಗುರುತಿಲ್ಲದವರಿಗೆ ಪರಿಚಯ ಹೇಳಲಾರೆ''ಪರಿಚಯಕ್ಕೇನು, ಮಾಡಿಕೊಂಡರಾಯಿತು. ನಾನು ಮನು. ೩ನೇ ಸೆಮ್ ಇ ಅಂಡ್ ಸಿ. ಊರು ಬೆಂಗಳೂರು, ನೀವು?'
ನಾನು ಈಗ ನಿಜಕ್ಕೂ ಸಂಕಟಕ್ಕೆ ಸಿಲುಕಿದೆ. ಹೀಗೆಯೆ ಎಷ್ಟೊ ಜನ ಮಿಸ್ ಕಾಲ್ ಗಳಿಂದ ಪರಿಚಿತರಾಗಿ ಗೆಳೆಯರಾಗಿರುವುದನ್ನು ಕೇಳಿದ್ದೆ. ಆದರೂ ನನ್ನ ನಿಜ ಪರಿಚಯ ಕೊಡಲು ಹಿಂಜರಿಕೆಯಾಯಿತು. ಇದು ಆತನಿಗೆ ಅರ್ಥವಾಯಿತೋ ಎಂಬಂತೆ ಆತನೇ ಮಾತು ಮುಂದುವರಿಸಿದ. 'ಪರವಾಗಿಲ್ಲ, ನೀವು ಹುಡುಗನೋ, ಇಲ್ಲ ಹುಡುಗಿಯೋ' ಎಂದು ಕೇಳಿದ.
ನನಗೆ ಈ ಪ್ರಶ್ನೆ ಕುತೂಹಲ ಹುಟ್ಟಿಸಿತು. ನಾನು ಹುಡುಗಿಯೆಂದರೆ ಇವನ ಪ್ರತಿಕ್ರಿಯೆ ಹೇಗಿರಬಹುದು ಅಂತ. ಆದರೂ ಹುಡುಗಿ ಎಂದು ಹೇಳಿ ಕೊಳ್ಳಲು ತುಸು ಹಿಂಜರಿಕೆಯಾಯಿತು. ಆದರೂ ನನಗೂ ಯಾಕೋ ಸ್ವಲ್ಪ ಇವನನ್ನು ಆಡಿಸಬೇಕು ಎಂದು ಅನ್ನಿಸಿತು. ನಾನು ನನ್ನ ಹೆಸರು ಹೇಳುವಾಗ ವಸಂತ ಎಂಬ ಲಿಂಗಭೇದ ತಿಳಿಯದ ಹೆಸರನ್ನು ಹೇಳಿದೆ. 'ಸರಿ ನಾನು ಈಗ ಕಾಲ್ ಮಾಡಲಾ ಫ಼್ರೆಂಡ್' ಎಂದ. ನಾನು ಮನೆಯಲ್ಲಿರುವುದಾಗಿಯೂ ನಾನು ಈಗ ಕಾಲ್ ಅಟೆಂಡ್ ಮಾಡಲು ಸಾಧ್ಯವಿಲ್ಲ, ಅಪ್ಪ ಅಮ್ಮ ಬೈತಾರೆ ಎಂದೆ. ಅಲ್ಲಿಗೆ ಅವನಿಗೆ ಸ್ಪಷ್ಟವಾಯಿತು, ಈ ವ್ಯಕ್ತಿ ಹುಡುಗಿಯೇ ಇರಬೇಕು ಎಂದು. ' ಪರವಾಗಿಲ್ಲ ವಸಂತ, ನೀವು ಮೆಸೆಜ್ ಮಾಡಿ ಸಾಕು' ಎಂಬ ಸಾಂತ್ವಾನ ಬೇರೆ. ಹೀಗೆ ಊರು ತರಗತಿ ಪಠ್ಯ ಎಲ್ಲವೂ ಖೊಟ್ಟಿ ಕೊಟ್ಟದಾಯಿತು. ಅನುಮಾನ ಬಾರದಿರಲೆಂದು ಒಮ್ಮೆ ನನ್ನ ಗೆಳೆತಿಯಿಂದ ಕಾಲ್ ಅಟೆಂಡ್ ಕೂಡ ಮಾಡಿಸಿ ಆಯಿತು. ಅಲ್ಲಿಗೆ ೧೦೦ ಶೇಕಡಾ ಹುಡುಗಿಯೇ ಅಂತ ಅಂದುಕೊಡ. ದಿನವೂ ಹೀಗೆ ಗುಡ್ ಮಾರ್ನಿಂಗ್, ಗುಡ್ ನೈಟ್, ಒಳ್ಳೊಳ್ಳೆ ಶಾಯರಿಗಳು ಬರತೊಡಗಿದವು. ಒಮ್ಮೊಮ್ಮೆ ಇಷ್ಟು ಒಳ್ಳೆ ಹುಡುಗನಿಗೆ ಸುಳ್ಳು ಹೇಳಿದೆನಲ್ಲ ಅನ್ನಿಸಿದುಂಟು.
ಹೀಗೆ ಸ್ವಲ್ಪದಿನ ಕಳೆದಿರಬೇಕು. ಒಂದು ದಿನ ರಾತ್ರಿ ಮೆಸೆಜ್ ಅಲ್ಲೇ (ಚಾಟಿಂಗ್) ಮಾತಾಡುವಾಗ ನನ್ನ ಹವ್ಯಾಸಗಳ ಕುರಿತು ಕೇಳಿದ.'ನಿಮಗೆ ಯಾವ ಬಣ್ಣದ ಡ್ರೆಸ್ ಗಳು ಇಷ್ಟ''ನನಗೆ ನೀಲಿ ಬಣ್ಣದ ಡ್ರೆಸ್ ಗಳು''ನೀವು ಜೀನ್ಸ್ ಹಾಕ್ತೀರಾ''ಇಲ್ಲ, ನನಗೆ ಇಷ್ಟ ಇಲ್ಲ, ಆದರೆ ಬೇರೆಯವರು ಹಾಕೊ ಬಗ್ಗೆ ನನಗೇನು ತಕರಾರಿಲ್ಲ''ಓ ಹಾಗಾದರೆ ನೀವು ತುಂಬಾ ಸಂಪ್ರದಾಯವಾದಿಗಳು ಅಂತ ಅಯ್ತು''ಹಾಗೇನು ಇಲ್ಲ, ಅದ್ರೆ ನನಗೆ ಇಷ್ಟ ಇಲ್ಲ ಅಷ್ಟೆ''ಓಹೋ, ಹಾಗೆ. ಏನ್ರೀ ಈಗಿನ ಹೈಸ್ಕೂಲ್ ಹುಡುಗಿರಷ್ಟು ಪ್ರಯೋಜನ ಇಲ್ಲ ನೀವು, ಯಾವ ರೀತಿ ಬಟ್ಟೆ ಹಾಕ್ತಿರ್‍ಇ ನೀವು ಐ ಮೀನ್ ವಾಟ್ ಟೈಪ್ ಆಫ್ ಡ್ರೆಸ್ ಯು ವಾಂಟ್ ಟು ವಿಯರ್?'ನಿಜಕ್ಕೂ ನನಗೆ ಏನು ಹೇಳಬೇಕು ಎಂದು ತಿಳಿಯಲ್ಲಿಲ್ಲ. ಆದರೂ ತೀರ ಸಂಕೋಚದಿಂದ ಚೂಡಿದಾರ್ ಎಂದೆ. ಆಗ ನಾನು ಊಹಿಸದೇ ಇರುವ ಪ್ರಶ್ನೆ ಬಂತು. 'ಹಾಗಾದರೆ ಅವನು ಅದರ ಅಳತೆ ಎಷ್ಟು' ಎಂದ. ಒಮ್ಮೆಗೆ ದಿಗಿಲು ಕವಿದಂತಾಯಿತು. ಅಯ್ಯೋ ಯಾಕಾದ್ರೂ ಇವನ ಜೊತೆ ಚಾಟ್ ಮಾಡಲು ಶುರು ಮಾಡಿದಿದೆನೋ ಎಂಬ ಮುಜುಗರ ಕಾಡತೊಡಗಿತು. ದೇವರಾಣೆಗೂ ನನಗೆ ಏನು ಉತ್ತರ ಹೇಳಬೇಕು ಎಂದು ಹೊಳೆಯಲ್ಲಿಲ್ಲ. ಕಡೆಗೆ ಏನೋ ಒಂದು ಉತ್ತರ ಕೊಟ್ಟೆ. ಅಲ್ಲಿಗೆ ಗುಡ್ ನೈಟ್ ಹೇಳಿ ಸಂಭಾಷಣೆಗೆ ಮುಕ್ತಾಯ ಹೇಳಿದೆ.
ಆದರೆ ಅದು ಆ ಹೊತ್ತಿಗೆ ಮುಗಿಯಲ್ಲಿಲ್ಲ. ಪ್ರತಿ ರಾತ್ರಿ ಅಂತಹದ್ದೇ ಪ್ರಶ್ನೆಗಳು. ಆದರೆ ಅಸಹ್ಯ ಹುಟ್ಟಿಸಿದ್ದು, ಆತ ಮೊದಲಿನ ಪ್ರಶ್ನೆಗಳನ್ನು ಬಳಸಿ ದೈಹಿಕ ಮಟ್ಟದ ಪ್ರಶ್ನೆಗಳನ್ನು ಕೇಳಲು ಆರಂಭಿಸಿದಾಗ. ಆರಂಭದಲ್ಲಿ ಸಭ್ಯರನ್ನು ಮೀರಿಸುವ ಹಾಗೆ ವರ್ತಿಸುತ್ತಿದ್ದವ ಸ್ವಲ್ಪ ಸಲುಗೆ ಬೆಳೆದಾಗ ಮಾತಾಡುವ ಪರಿಯೇ ಬೇರೆಯಾಗಿತ್ತು. (ಸಭ್ಯತೆಯ ಕಾರಣಕ್ಕೆ ಕೆಲ ಸಂಭಾಷಣೆಗಳನ್ನು ಮಾತ್ರ ನೀಡಿದ್ದೇನೆ) ಕಡೆಗೆ ಈ ಚಾಟಿಂಗ್ ನಿಂದ ಬಿಡುಗಡೆ ಪಡೆಯಲು ಹರಸಾಹಸ ಮಾಡಬೇಕಾಯಿತು.
ಇಂತಹವರು ಸುಮ್ಮನೆ ಯಾವುದೋ ನಂಬರ್ ಒತ್ತಿ ಹುಡುಗನಾದರೆ ಸ್ಸಾರಿ ಹೇಳಿ, ಹುಡುಗಿಯಾದರೆ ಗಂಟೆಗಟ್ಟಲೇ ಮಾತಾಡುತ್ತಾರೆ. ಇವರ ಮಾತುಗಳು ಆರಂಭಕ್ಕೆ ಎಷ್ಟು ನಯ ಎನು ವಿನಯ ಏನು ಕತೆ, ವಚನಕಾರರ ಮಾತಲ್ಲಿ ಹೇಳುವುದಾದರೆ 'ಲಿಂಗವೇ ಮೆಚ್ಚಿ ಅಹುದಹುದೆನ ಬೇಕು..' ಎಷ್ಟೋ ವೇಳೆ ಚಿಕ್ಕ ಪ್ರಾಯದ ಹೆಣ್ಣು ಮಕ್ಕಳು ಇಂಥವರ ಸಮ್ಮೋಹಿನಿಗೆ ಒಳಗಾಗುವುದುಂಟು. ಹೆಣ್ಣು ಮಕ್ಕಳೊಂದಿಗೆ ಅಸಹ್ಯವಾಗಿ ಮಾತಾಡುವುದೇ ಇವರ ವಿಕೃತಿ. ಇದರಲ್ಲಿ ಒಳ್ಳೆ ಕಲಿತವರು ಇರುತ್ತಾರೆ ಎಂಬುದು ಬೇಸರದ ಸಂಗತಿ. ಕೇವಲ ಒಮ್ಮೆಯೇ ಇಂಥ ಪ್ರಸಂಗವನ್ನು ಎದುರಿಸಲು ಇಷ್ಟು ಕಷ್ಟಕರವಾಗಿತ್ತು, ಇನ್ನು ಯಾವಾಗಲೂ ಇಂಥಹದ್ದೇ ಕಿಡಿಗೇಡಿಗಳ ಉಪಟಳವನ್ನು ನಿಭಾವಣೆ ಎಷ್ಟು ಕಷ್ಟದ್ದು. ಅದು ಏನೇ ಇರಲಿ ಇಂತಹ ವ್ಯಕ್ತಿಗಳಿಂದ ಒಂದಂತೂ ನಿಜ.
ನಿಜವಾಗಿಯೂ ಹೆಣ್ಣು ಮಕ್ಕಳ ಕಷ್ಟ ದೊಡ್ಡದು.. ಒಮ್ಮೆಗೇ ಅದರ ಪರಿಚಯವಾಯಿತು.

ನಾವಾಗಿದ್ರೆ......?

ನಮ್ಮ ಗೆಳೆಯನೊಬ್ಬನ ಬಗ್ಗೆ ನಮಗೆ ವಿಪರೀತ ಅಸಡ್ಡೆ. ಸದಾ ತಿಂಡಿಯದ್ದೇ ಜ್ಞಾನ. ಕಲಿಯುವುದರಲ್ಲಿ ಆರಕ್ಕೆರಲ್ಲ, ಮೂರಕ್ಕಿಳಿಯಲ್ಲ. ಅಪ್ಪನ ದುಡ್ಡಿನಿಂದ ಎಂಜಿನಿಯರಿಂಗ್ ಸೀಟ್ ಸಿಕ್ಕಿತು. ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು. ಯಾವಾಗಲು ಬೈಕ್ ಬಿಟ್ಟು ಇಳಿಯಲಾರ. ನಿಂತಲ್ಲಿ ನಿಲ್ಲಲಾರ. (ಅವನು ಹಾಗೆ ನಿಲ್ಲದೇ ಇರೋದಕ್ಕೆ ಪಾಪ ಬೇರೆಯದೇ ಕಾರಣ ಇದೆ. ಕನಕಾಂಗಿ ಕೈಗೆ ಸಿಕ್ಕವರು ಕೋಲೆಬಸವನಾಗದೇ ವಿಧಿಯುಂಟೇ?)
ನೂರು ಸಲ ಹೇಳಿದ ಕೆಲಸ ನೂರಾವೊಂದನೆ ಸಲ ಮಾಡ್ತಾನೆ. ಇಂಥವನಿಗೊಂದು ಹುಟ್ಟುಹಬ್ಬ. ಇದಕ್ಕೆ ಖಗಪಕ್ಷಿಗಳ ಹಾಗೆ ಕಾದ ಸ್ನೇಹಿತರು ಒಂದು ವಾರದ ಮುಂಚಿನಿಂದಲೇ ತಯಾರಿ. ಯಾವುದಕ್ಕೆ ಎಲ್ಲಿ ಪಾರ್ಟಿ ಮಾಡೋದು ಅಂಥಾ. ಆದರೆ ಈ ಬಕಾಸುರ ನಗುತ್ತಾನೆಯೇ ಹೊರತು ಪ್ಲೇಸ್ ಬಾಯಿ ಬಿಡೊಲ್ಲ. ಇವನು ಸಿಕ್ರೇಟ್ ಗಿಷ್ಟು ಮೊದಲು ಎಲ್ಲಿ ಎಂದು ಹೇಳಬಾರದೇ ಎಂದುಕೊಂಡವರು ತುಂಬಾ ಜನ. ಆ ದಿನದ ಅತಿಥ್ಯಕ್ಕೆ ವಾರ ಉಪವಾಸ ಮಾಡ್ತೀನಿ ಗುರು ಅಂದೋರು ಇದ್ದರು. ಏನೇ ಹೇಳಲಿ ಇವನು ಬಾಯಿ ಬಿಡೋಲ್ಲ.
ಕೊನೆಗೆ ಈ ಮಹಾನುಭಾವನ ಹುಟ್ಟಿದ ದಿನವೂ ಬಂತು. ಸಂಜೆಯಲ್ವಾ ಪಾರ್ಟಿ ಅಂತಾ ಎಲ್ಲರೂ ಕಾಯ್ತಾ ಇದ್ದರು. ಸಂಜೆಯಾದ್ರು ಈ ಮಹಾನುಭಾವನ ಕಾಲ್ ಇಲ್ಲ. ಇನ್ನು ಫ್ರೆಂಡ್ಸ್ ಸುಮ್ನೆ ಇರ್ತಾರಾ? ಅವರೇ ಫೋನ್ ಮಾಡಿದ್ರು. ಅವನ ಉತ್ತರ ಕೇಳಿ ಅವರಿಗೆಲ್ಲ ತಲೆ ತಿರುಗೊದೊಂದೆ ಬಾಕಿ. ಪಾರ್ಟಿ ಮಧ್ಯಾಹ್ನನೇ ಮುಗಿತು ಎಂದು ನಿರುಮ್ಮಳನಾಗಿ ಫೋನ್ ಇಟ್ಟನಂತೆ. ಇವರು ನನಗೆ ಫೋನ್ ಮಾಡಿ ಅವನ ಗುಣಗಾನ ಆರಂಭ ಮಾಡಿದ್ರು. ಮೊದಲೇ ಅವನ ಬಗ್ಗೆ ನಮಗೆ ಅಸಡ್ಡೆ. ಹೀಗೆ ಮಾಡಿದ್ರೆ ಕೇಳಬೇಕೆ? ಆದ್ರೂ ನನಗೆ ಇದರಲ್ಲಿ ಎನೋ ವಿಶೇಷ ಇದೆ ಅನ್ನಿಸ್ತು. ಯಾಕಂದ್ರೆ ದುಡ್ಡು ಮಜಾ ಮಾಡೋಕೆ ಅನ್ನೋನು ಪಾರ್ಟಿ ತಪ್ಪಿಸಿ ಹಣ ಉಳಿಸಲು ಹೋಗಲ್ಲ. ಸಮಯ ಬಂದಾಗ ಕೇಳಿದರಾಯ್ತು ಅಂತ ಸುಮ್ಮನಾದೆ.
ಒಂದು ದಿನ ಅವನೇ ಯಾವುದೋ ವಿಷಯ ಕೇಳೊಕೆ ಬಂದ. ಆಗ ನಾನು ಪಾರ್ಟಿ ವಿಷಯ ಕೇಳಿದೆ. ಅದಕ್ಕೆ ಅವನು ಒಂದು ಕ್ಷಣ ಸುಮ್ಮನಿದ್ದು, 'ನೋಡು ನಾನು ಆ ದಿನ ಖರ್ಚು ಮಾಡಬೇಕಿದ್ದ ಹಣನೆಲ್ಲಾ ಲೆಕ್ಕ ಹಾಕಿದೆ. ಇದಕ್ಕಿದ್ದ ಹಾಗೆ ನನ್ನ ಗೆಳೆಯರು ಹಣಕಾಸಿನಲ್ಲಿ ಕಷ್ಟದಲ್ಲಿರೋದು ನೆನಪಾಯ್ತು. ಅವರಿಗೆ ನೇರ ಹಣ ಕೊಟ್ಟರೆ ತಗೋಳಲ್ಲ. ದೇವರು ಬಡತನದ ಜೊತೆಗೆ ಸ್ವಾಭಿಮಾನನೂ ಕೊಟ್ಟಿರುತ್ತಾನೆ. ಅದಕ್ಕೆ ನಾನು ಹುಟ್ಟು ಹಬ್ಬದ ನೆವ ಮಾಡಿಕೊಂಡು ಅವರಿಗೆಲ್ಲ ಗಿಫ್ಟ್ ಕೊಡೊ ನೆಪದಲ್ಲಿ ನಮಗೆ ಆ ವರ್ಷ ಬೇಕಾದ ಟೆಕ್ಟ್ ಬುಕ್ ಗಳನ್ನು ತಂದು ಅವರಿಗೆ ಕೊಟ್ಟೆ. ಅಮ್ಮನೇ ಮಾಡಿದ ವಿಶೇಷ ಅಡುಗೆಯನ್ನು ಬಡಿಸಿದೆ. ಅವರ ಖುಷಿಯಲ್ಲಿ ನನಗೆ ಅದೇನೊ ಆನಂದ ಕಣೊ. ನನಗೆ ದೇವರು ಇಷ್ಟೊಂದು ಕೊಟ್ಟಿರುವಾಗ ನಾನು ಕೊನೆಪಕ್ಷ ನನ್ನ ಗೆಳೆಯರ ನೆರವಿಗೆ ಬರಲಿಲ್ಲ ಅಂದ್ರೆ ಏನು ಪ್ರಯೋಜನ ಅನ್ನಿಸ್ತು. ಅದಕ್ಕೆ ಹಾಗೆ ಮಾಡಿದೆ. ನಾನು ಪಾರ್ಟಿ ಕೊಡದೇ ಇರೊ ಬಗ್ಗೆ ನನಗೇನು ವಿಷಾದ ಇಲ್ಲ ಅಂತ ಏನೇನೊ ಹೇಳ್ತಾ ಇದ್ದ.... ನನಗೆ ಮಾತಾಡಲು ಬಾಯಿ ಬರಲ್ಲಿಲ್ಲ. ನನ್ನ ಕಣ್ಣುಗಳೆ ಮಾತಾಡುತ್ತಿದ್ದವು...